Pages

Monday 18 March 2013

ಅಬ್ಬೆತುಮಕೂರು ಅಭಿನವ ಕಲ್ಯಾಣ




ಜಾತ್ಯತೀತ ನೆಲೆಯಲ್ಲಿ ಸರ್ವರನ್ನು ಸಮಾನತೆಯಿಂದ ಕಾಣುವ ಮಾನವತೆಯ ನೆಲೆಬೀಡಾಗಿರುವ ಅಬ್ಬೆತುಮಕೂರು ಸಿದ್ಧ ಸಂಸ್ಥಾನ ಮಠ ಅಭಿನವ ಕಲ್ಯಾಣವಾಗಿದೆ ಎಂದು ಗುಲ್ಬರ್ಗದ ಸುಲಫಲ ಮಠದ ಡಾ. ಮಹಾಂತ ಶಿವಾಚಾರ್ಯರು ಅಭಿಪ್ರಾಯಪಟ್ಟರು.
  ತಾಲೂಕಿನ ಅಬ್ಬೆತುಮಕೂರಿನಲ್ಲಿ ವಿಶ್ವರಾಧ್ಯರ 58ನೇ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಮಾನವ ಧರ್ಮ ಸಮಾವೇಶದಲ್ಲಿ ಮಾತನಾಡಿ, ನಾಡಿನಲ್ಲಿರುವ ಅನೇಕ ಮಠಾಧೀಶರು ಬಸವಾದಿ ಶರಣರ ತತ್ವಗಳನ್ನು ಬಾಯಲ್ಲಿ ಮಾತ್ರ ಪಠಿಸುತ್ತಾರೆ. ಆಚರಣೆಯಲ್ಲಿ ಮಾತ್ರ ಶೂನ್ಯ. ಆದರೆ ಅಬ್ಬೆತುಮಕೂರಿನ ಡಾ. ಗಂಗಾಧರ ಸ್ವಾಮೀಜಿ ಶರಣ ಪರಂಪರೆಯನ್ನು ಅನುಸರಿಸುತ್ತಾ, ಎಲ್ಲರನ್ನು ಒಂದೇ ಭಾವದಿಂದ ಕಾಣುತ್ತಾ, ಬಸವಾದಿ ಶರಣರ ಪರಂಪರೆಯನ್ನು ಮಠದಲ್ಲಿ ಸಾಕ್ಷಾತ್ಕಾರಗೊಳಿಸಿದ್ದಾರೆ ಎಂದು ಕೊಂಡಾಡಿದರು.
5 ದಿನಗಳ ವಿಶೇಷ ಕಾರ್ಯಕ್ರಮ: ಬರುವ ಏಪ್ರಿಲ್‌ನಲ್ಲಿ 5 ದಿನಗಳ ವಿಶೇಷ ಕಾರ್ಯಕ್ರಮದ ಮೂಲಕ ಅಬ್ಬೆತುಮಕೂರು ಮಠ ಐತಿಹಾಸಿಕ ದಾಖಲೆ ಬರೆಯಲಿದೆ. ನಾಡಿನ 5 ಸಾವಿರ ಮಠಾಧೀಶರಿಗೆ ಮಾಡಲಾಗದ ಕಾರ್ಯವನ್ನು ಗಂಗಾಧರ ಶ್ರೀಗಳು ಮಾಡುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
  ಹಾರಕೂಡದ ಚನ್ನವೀರ ಶಿವಾಚಾರ್ಯರು ಮಾನವ ಧರ್ಮ ಸಮಾವೇಶ ಉದ್ಘಾಟಿಸಿ, ಕಾಶಿ ಘನಪಂಡಿತರಾಗಿದ್ದ ವಿಶ್ವರಾಧ್ಯರು, ಅನುಭಾವದ ಮೇರುಗಿರಿಯನ್ನೇರಿದ ಮಹಾನುಭಾವ. ಜನಮನದ ಕಾವಿಕೆಯನ್ನು ಕಳೆಯಲು ಶ್ರಮಿಸಿದ ಮಹಾಂತರು. ಅಂತಹ ಸಿದ್ಧಿ ಪುರುಷ ಇಂದಿಗೂ ಜಾಗೃತವಾಗಿದ್ದು, ಲಕ್ಷಾಂತರ ಭಕ್ತರನ್ನು ಉದ್ದರಿಸುತ್ತಿದ್ದಾರೆ ಎಂದು ನುಡಿದರು.
  ವಾಗಣಗೇರಿಯ ಡಾ. ವಿಶ್ವರಾಧ್ಯ ಶಿವಾಚಾರ್ಯರು, ಸೊನ್ನದ ಶಿವಾನಂದ ಸ್ವಾಮೀಜಿ ಮಾತನಾಡಿ, ಡಾ. ಗಂಗಾಧರ ಸ್ವಾಮೀಜಿಗಳ ಜನಕಲ್ಯಾಣ ಕಾರ್ಯಗಳನ್ನು ಕೊಂಡಾಡಿದರು.
ವಿಶ್ವಾರಾಧ್ಯರು ಮನುಕುಲದ ಉದ್ಧಾರಕರು: ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಮಠದ ಪೀಠಾಧಿಪತಿ ಡಾ. ಗಂಗಾಧರ ಸ್ವಾಮೀಜಿ ಆಶೀರ್ವಚನ ನೀಡಿ, ವಿಶ್ವರಾಧ್ಯರು ಮನುಕುಲದ ಉದ್ಧಾರಕರು. ಆತನ ದಿವ್ಯ ಚೈತನ್ಯ ಕೈ ಹಿಡಿದು ನಡೆಸುತ್ತಿದೆ. ಎಲ್ಲ ಭಕ್ತ ಸಮೂಹದ ಸಹಕಾರದಿಂದ ಶ್ರೀಮಠದಲ್ಲಿ ಸಮಾಜಮುಖಿ ಕಾರ್ಯಕ್ರಮಗಳು ನಿರಂತರ ನಡೆಯಲು ಕಾರಣವಾಗಿದೆ ಎಂದರು.
  ಏಪ್ರಿಲ್‌ನಲ್ಲಿ ನಡೆಯುವ ಕಾರ್ಯಕ್ರಮ ಬೃಹತ್ ಪ್ರಮಾಣದಾಗಿದ್ದು, ಐದು ದಿನಗಳ ಕಾಲ ಸಾಂಸಾರಿಕ ಜಂಜಾಟ, ತಾಪತ್ರಾಯಗಳಿಂದ ಮುಕ್ತರಾಗಿ ಶ್ರೀಮಠ ನಮ್ಮದೆಂಬ ಭಾವದಿಂದ ತಾವೆಲ್ಲ ಬಂದು ಸಮಾರಂಭವನ್ನು ಯಶಸ್ವಿಗೊಳಿಸುತ್ತೀರಿ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
  ಶಹಾಪುರದ ಫಕೀರೇಶ್ವರ ಮಠದ ಗುರುಪಾದ ಸ್ವಾಮೀಜಿ, ದೊರನಳ್ಳಿಯ ವೀರಮಹಾಂತ ಶಿವಾಚಾರ್ಯರು, ದೇವದುರ್ಗದ ಕಪಿಲ ಸಿದ್ದರಾಮ ಶಿವಾಚಾರ್ಯರು, ಹಲಕಟ್ಟಿಯ ಮುನೀಂದ್ರ ಶಿವಾಚಾರ್ಯರು, ಚರಬಸವೇಶ್ವರ ಮಠದ ಬಸವಯ್ಯ ಶರಣರು, ಯಡ್ರಾಮಿಯ ರುದ್ರಮುನಿ ಶಿವಾಚಾರ್ಯರು, ಚಿತ್ತಾಪುರ ಶಾಸಕ ವಾಲ್ಮೀಕಿ ನಾಯಕ, ಜಿಪಂ ಅಧ್ಯಕ್ಷೆ ಮರೆಮ್ಮ ಶಾಣ್ಯೆನೂರ, ಡಾ.ಶರಣಭೂಪಾಲರೆಡ್‌ಡಿ ನಾಯ್ಕಲ್ ಇದ್ದರು. ವಿಶ್ವನಾಥರೆಡ್ಡಿ ಮಾಲಿಪಾಟೀಲ್, ವೆಂಕಟರೆಡ್ಡಿ ಮಾಲಿಪಾಟೀಲ್ ಅವರನ್ನು ಮಠದ ವತಿಯಿಂದ ಗೌರವಿಸಲಾಯಿತು.
ಸನ್ಮಾನ: ಇದೇ ವೇಳೆ ಹೈದರಾಬಾದಿನ ಸೋಲಿ ಜನಾರ್ದನರೆಡ್ಡಿ, ಸಿದ್ರಾಮರೆಡ್ಡಿ ತಂಗಡಗಿ, ರಾಯಚೂರಿನ ಸವಾದೆಪ್ಪ ಶರಣರು, ಹೊನ್ನಕಿರಣಗಿಯ ಅಖಂಡಪ್ಪ ಶಿರವಾಳ, ಕಲ್ಬುರ್ಗಿಯ ಬಸವರಾಜ ಮತ್ತಿಮುಡು, ಮುಂಬೈಯ ರಾಜು ಬಾಂಬೆ, ಬಸಪ್ಪ ಮೇಸ್ತ್ರಿ, ಯಾದಗಿರಿ ಮಲ್ಲಿಕಾರ್ಜುನ ಸಿರಗೋಳ, ಶಹಾಬಾದ ಹಾಗೂ ಬಿಜಾಪುರದ ವಿಶ್ವಾರಾಧ್ಯ ಸೇವಾ ಸಮಿತಿ ಅಧ್ಯಕ್ಷರು, ಸೋಲಾಪುರದ ಪಂಚಾರಿ, ಶಹಾಬಾದನ ವಿಶ್ವರಾಧ್ಯ ಪಬ್ಲಿಸಿಟಿ ಮಾಲೀಕರನ್ನು ಸನ್ಮಾನಿಸಲಾಯಿತು.
  ಬಸವರಾಜ ಶಾಸ್ತ್ರಿ ಪ್ರಾರ್ಥಿಸಿದರು. ನಾಗರಡ್ಡಿ ಪಾಟೀಲ್ ಕರದಾಳ ಸ್ವಾಗತಿಸಿದರು. ಪ್ರಾಚಾರ್ಯ ಡಾ. ಸುಭಾಶ್ಚಂದ್ರ ಕೌಲಗಿ ನಿರೂಪಿಸಿ, ವಂದಿಸಿದರು.

No comments:

Post a Comment