Pages

Monday 18 March 2013

ಅಬ್ಬೆತುಮಕೂರು ವಿಶ್ವರಾಧ್ಯ ರಥೋತ್ಸವಕ್ಕೆ ಲಕ್ಷಾಂತರ ಭಕ್ತರು

ಸೂರ್ಯ ತನ್ನ ನಿತ್ಯದ ಕಾರ್ಯ ಮುಗಿಸಿ ಅಸ್ತಂಗತನಾಗುವ ತವಕದಲ್ಲಿದ್ದ. ಇತ್ತ ಲಕ್ಷಾಂತರ ಭಕ್ತರ ದಂಡು ವಿಶ್ವರಾಧ್ಯರ ರಥೋತ್ಸವದ ಉತ್ಸಾಹದಲ್ಲಿದ್ದರು. ಪೀಠಾಧಿಪತಿ ಡಾ. ಗಂಗಾಧರ ಸ್ವಾಮೀಜಿ ಶನಿವಾರ ಮುಸ್ಸಂಜೆ 6.30ಕ್ಕೆ ರಥವನ್ನೇರಿ ರಥೋತ್ಸವಕ್ಕೆ ಚಾಲನೆ ನೀಡಿದರು. ಮಠದ ಆವರಣದಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಜನತೆ ರಥವನವನ್ನೆಳೆದು ಸಂಭ್ರಮಿಸಿದರು.


ತೇರಿನ ಮೇಲೆ ಕಾರಿಕಾಯಿ, ಉತ್ತುತ್ತಿಗಳನ್ನು ಎಸೆದು ಭಕ್ತಿಯನ್ನು ಸಮರ್ಪಿಸಿದರು. ಬೇಡಿದ್ದನ್ನು ನೀಡುವ ಭಗವಂತ ವಿಶ್ವರಾಧ್ಯನಲ್ಲಿ ತಮ್ಮ ಬಯಕೆ ಭಾವನೆಗಳನ್ನು ಈಡೇರಿಸುವಂತೆ ಭಕ್ತಿಯಿಂದ ಶಿರಬಾಗಿ, ಕರ ಜೋಡಿಸಿ ನಮಿಸಿದರು. ತಾಲೂಕಿನ ಸುಕ್ಷೇತ್ರ ಅಬ್ಬೆತುಮಕೂರು ಸಿದ್ಧಸಂಸ್ಥಾನ ಮಠದಲ್ಲಿ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವದ ನಿಮಿತ್ತ ಶನಿವಾರ ಸಂಜೆ ರಥೋತ್ಸವ ಭಕ್ತಸಾಗರದ ಮಧ್ಯೆ ವೈಭವದಿಂದ ಜರುಗಿತು.


ಮೂಢತನ ದೂರ ಮಾಡುವ ಆರೂಢ: ನಾಡವರ ಮೂಢತನವನ್ನು ದೂರ ಮಾಡುವ ಆರೂಢರು ವಿಶ್ವರಾಧ್ಯರು. ಅಂತೆಯೆ ಜಾತ್ರೆಗೆ ಕರ್ನಾಟಕ, ಆಂಧ್ರ, ಮಹಾರಾಷ್ಟ್ರಗಳಿಂದ ಲಕ್ಷಾಂತರ ಭಕ್ತರು ಹರಿದು ಬಂದಿದ್ದರು. ಸರತಿ ಸಾಲಿನಲ್ಲಿ ನಿಂತು ಕಾಯಿ, ಕರ್ಪೂರ ಅರ್ಪಿಸಿ ಭಕ್ತಿಯನ್ನು ಮೆರೆದರು.


ಶನಿವಾರ ಬೆಳಗ್ಗೆ ವಿಶ್ವರಾಧ್ಯರ ಕರ್ತೃ ಗದ್ದುಗೆಗೆ ಗೋರಟಾ ಸಂಗೀತ ಬಳಗದಿಂದ ವಿಶೇಷ ರುದ್ರಾಭಿಷೇಕ ಜರುಗಿತು. ನಂತರ ಪುರಾಣ ಮಂಗಲ ಹಾಗೂ ಪಲ್ಲಕ್ಕಿ ಉತ್ಸವ, ಪುರವಂತರ ಸೇವೆಯೊಂದಿಗೆ ಗ್ರಾಮದಲ್ಲಿ ನಡೆಯಿತು.


ಭಕ್ತಿಯ ಬೀಡು: ಹಲಗೆ, ಬಾಜಾ, ಭಜಂತ್ರಿ, ಡೊಳ್ಳು ಮುಂತಾದ ಮಂಗಲ ವಾದ್ಯಗಳ ಸದ್ದು, ನೆರೆದ ಭಕ್ತರ ಸಡಗರ, ಪುರವಂತರ ಸೇವೆ ಇವುಗಳಿಂದ ಅಬ್ಬೆತುಮಕೂರ ಭಕ್ತಿಯ ಬೀಡಾಗಿತ್ತು. ಬಿಳಿಜೋಳ, ಸಜ್ಜಿ ರೊಟ್ಟಿ, ಪುಂಡಿ ಪಲ್ಯ, ಶೇಂಗಾ ಹಿಂಡಿ, ಹಿಂಡಿ ಪಲ್ಯ, ಅನ್ನ ಸಾರಿನ ದಾಸೋಹ ನಿರಂತರವಾಗಿ ನಡೆದಿತ್ತು. ಫಳಾರ ಕೊಳ್ಳುವವರ ಭರಾಟೆಯೂ ವಿಪರೀತವಾಗಿತ್ತು. ಒಳ್ಳೆಯ ವ್ಯಾಪಾರವಾಗಿದ್ದರಿಂದ ಅಂಗಡಿಯವರು ಖುಷಿ ಖುಷಿಯಾಗಿದ್ದರು. ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದ ಜನರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಡುತ್ತಿದ್ದರು.


ಜನಪ್ರತಿನಿಧಿಗಳ ದಂಡು: ಈ ವೇಳೆ ಶಾಸಕ ಡಾ. ಮಾಲಕರಡ್ಡಿ, ಸಿದ್ದರಾಮ ಮೇತ್ರೆ, ಡಾ. ವೀರಬಸವಂತರಡ್ಡಿ ಮುದ್ನಾಳ, ನಾಗನಗೌಡ ಕಂದಕೂರ, ಚನ್ನಾರಡ್ಡಿ ಪಾಟೀಲ್ ತೂನ್ನೂರ್, ಲಿಂಗನಗೌಡ ಮಲ್ಹಾರ್, ಶ್ರೀನಿವಾಸ ರಡ್ಡಿ ಚನ್ನೂರ್, ವೆಂಕಟರಡ್ಡಿ ಮುದ್ನಾಳ, ಡಾ. ಸುಭಾಶ್ಚಂದ್ರ ಕೌಲಗಿ, ಚನ್ನಪ್ಪಗೌಡ ಮೋಸಂಬಿ, ವಿಶ್ವನಾಥ ಸಿರವಾಳ, ಹಣಮಂತರಾವ ಹೆಂದೆ, ರವಿ ಬಾಪುರೆ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದರು.















No comments:

Post a Comment